ನನ್ನ ಬ್ಲಾಗ್ ಪುಟಕ್ಕೆ ಆತ್ಮೀಯ ಸ್ವಾಗತ, ನಿಮ್ಮ ಅನಿಸಿಕೆಗಳನ್ನು ತಿಳಿಸಿ(ನಿಮ್ಮ ಅನಿಸಿಕೆಗಳೇ ನನ್ನ ಬರವಣಿಗೆಗೆ ಸ್ಪೂರ್ತಿಯಾಗಲಿ) ಫೋಟೋಗಳನ್ನು ನೋಡಲು ನನ್ನ ಫೋಟೋ ಗ್ಯಾಲರಿ ಗೆ ಹೋಗಲು ಇಲ್ಲಿ ಕ್ಲಿಕ್ಕಿಸಿ

Saturday 10 March 2012

ಅನಿಸಿದ್ದು, ತೋಚಿದ್ದು ಗೀಚಿದ್ದು ಹಾಗೇ ಸುಮ್ಮನೆ.....

ನಾನು ಬ್ಲಾಗ್ ನಲ್ಲಿ ಬರೆಯೋದನ್ನು ಬಿಟ್ಟು ಬಿಟ್ಟೆನಾ, ಮರೆತು ಹೋಗಿದೆಯಾ.. ಬರೆಯಬೇಕು, ಬರವಣಿಗೆ ಪುನಃ ಆರಂಭವಾಗಬೇಕು, ಅದೇ ಲಯ ಇದೆಯಾ, ಅಥವಾ ಅಕ್ಷರ, ಪ್ರಾಸಗಳು, ಪದ ಪುಂಜಗಳು ಹೊಳೆಯದೇ ತಡವರಿಸುತ್ತದೆಯಾ ಮನಸ್ಸು, ಹೀಗೆಲ್ಲಾ ಪ್ರಶ್ನೆಗಳು ನನ್ನ ಕಾಡ ತೊಡಗಿತು...ಚಿತ್ರಕ್ಕ ಹೇಳಿದಂತೆ ಬರವಣಿಗೆಯ ಇಳಿಕೆಯ ಕಾಲವಾ ಎಂದು ಯೋಚಿಸಿದರೆ ನಾನು ಬರವಣಿಗೆಯ ಉತ್ತುಂಗಕ್ಕೆ ಏರಲೇ ಇಲ್ಲ, ಟೈಮ್ಲೀ ಅಪ್ಡೇಟುಗಳು ಅಂತ ಆಗಲಿ, ವಾರಕ್ಕೊಂದು ಲೇಖನ ಅಂತಲೋ, ಈ ತಿಂಗಳು ಬರೆಯಲೇ ಬೇಕು ಅಂತಲೋ ಒಂದು ಕಟ್ಟುನಿಟ್ಟಾದ ಅಲಿಖಿತ ಶರತ್ತನ್ನು ಸಹ ವಿಧಿಸಿಕೊಂಡವನಲ್ಲ, ಅದು ನನ್ನಿಂದ ಸಾಧ್ಯವಿಲ್ಲವೆಂದು ನನಗೇ ಗೊತ್ತು.

     ಮುಂಚೆಯಾದರೆ ಸ್ನೇಹಿತರು ಬ್ಲಾಗಲ್ಲಿ ಏನಾದರೂ ಬರೆದಿದ್ದೀಯ ಕೇಳುತ್ತಿದ್ದರು, ಈಗ ಅವರೆಲ್ಲರಿಗೂ ಮನದಟ್ಟಾಗಿ ಹೋಗಿದೆ, ಇವನು ಹೇಳಿದ ತಕ್ಷಣ ಬರೆಯುವವನಲ್ಲ ಎಂದು. ನನ್ನ ಬ್ಲಾಗ್ ಇದೇ ಅನ್ನೋದೆ ಮರೆತು ಹೋಗುವಷ್ಟು ದಿನಗಳಾಗಿ ಹೋಗಿದೆ, ಬ್ಲಾಗ್ ಖಾಲಿ ಬಿಟ್ಟು... ಅದೇ ಹಳತಾದ ಪೋಸ್ಟನ್ನೇ ನೋಡಿ ನೋಡಿ ಅನೇಕರಿಗೆ ಬೇಸರ ಬಂದಿರಬಹುದು, ಇದೊಂದು ಅಪ್ಡೇಟಾಗದ ಬ್ಲಾಗ್ ಇರಬೇಕು ಎಂದು ಅನ್ನಿಸಿರಲು ಸಾಕು,

     ಏನಾದರೂ ಬರೆಯೋಕು ಸಹ ಮೂಡ್ ಅನ್ನೋದು ಬೇಕು.. ಮೂಡ್ ಇಲ್ಲದೇ ಯಾವ ಕೆಲಸ ಮಾಡಿದರೂ ಅದು ತೃಪ್ತಿದಾಯಕವಾಗಲು ಸಾಧ್ಯವೇ ಇಲ್ಲ, ನನಗೇ ಅನ್ನಿಸಬೇಕು ಬರೆಯಬೇಕು ಎಂದು ಅಲ್ಲಿಯ ತನಕ ಒತ್ತಾಯಕ್ಕೋ ಬರೆಯಬೇಕಲ್ಲಾ ಎಂದು ಬರೆದ ಬರವಣಿಗೆಯಲ್ಲಿ ಸತ್ವದ ಕೊರತೆ ಇದ್ದೇ ಇರುತ್ತದೆ,...

     ಹಾಗೇ ಸುಮ್ಮನೆ ಅಂತ ನನ್ನ ಬ್ಲಾಗ್ ಆಗಿರೋದರಿಂದ ಹಾಗೇ ಸುಮ್ಮನೆ ಅನ್ನಿಸಿದ್ದೆಲ್ಲವನ್ನೂ ಹಾಗೇ ಬರೆದುಬಿಡಬೇಕು ಅಂತ ಕುರ್ಚಿಗೆ ಒರಗಿಕೊಂಡು ಬೆರಳುಗಳಿಗೆ ಕೆಲಸ ಕೊಡಲು ಆರಂಬಿಸಿದ್ದೇನೆ

     ಅಂತರ್ಜಾಲ ವ್ಯವಸ್ಥೆಯಿಂದ ಎಲ್ಲವೂ ಕುಳಿತಲ್ಲಿಯೇ ಮಾಡಬಹುದು... ಆದರೆ ಕೆಲವು ಸಾರಿ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದರಲ್ಲಿಯೂ ಸಹ ಅನೇಕ ಕುಂದು ಕೊರತೆಗಳಿವೆ ಅನಿಸಿದ್ದಕ್ಕೂ ಸಕಾರಣವಿದೆ, ಫೋನ್ ಬಿಲ್ಲುಗಳನ್ನು ಮನೆಯಲ್ಲಿ ಕುಳಿತೇ ಕಟ್ಟಿಬಿಡಬಹುದು, ಅದ್ಬುತ! ಕುಳಿತಲ್ಲಿಯೇ ಕಷ್ಟಪಡದೇ ಎಲ್ಲಾ ಕೆಲಸ ಮಾಡಿಬಿಡಬಹುದು ಎಂದು ನಾನು ಹಲವು ಬಾರಿ ನೆಟ್ ಬ್ಯಾಂಕಿಂಗ್ ಮುಖಾಂತರ ಕಟ್ಟಿದ್ದೆ. ಮುಂದಿನ ಬಿಲ್ಲಿನಲ್ಲಿ ಶೇಕಡಾ ೧ರಷ್ಟು ರಿಯಾಯಿತಿ ಬೇರೆ, ಯಾರಿಗುಂಟು ಯಾರಿಗಿಲ್ಲ ಎಂದು ಖುಷಿ ಪಟ್ಟಿದ್ದಿದೆ, ಸರಿಯಾಗಿದ್ದರೆ ಎಲ್ಲಾ ಸೌಲಭ್ಯ ಬಳಸಿಕೊಳ್ಳಬಹುದು.. ಆದರೆ ಕಟ್ಟಿದ ಬಿಲ್ಲು ಸಹ ಕಟ್ಟಿಲ್ಲವೆಂದು ಮುಂದಿನ ಬಿಲ್ಲಿನಲ್ಲಿ ಬಂದಾಗ ಅದನ್ನು ಸರಿ ಮಾಡಿಸಲು ಮತ್ತೆ ಅಲೆಯಬೇಕಲ್ಲಾ ಅದಕ್ಕಿಂತ ಕ್ಯೂನಲ್ಲಿ ನಿಂತು ಬಿಲ್ಲು ಕಟ್ಟಿ ಅಧಿಕೃತ ರಶೀದಿ ಪಡೆಯುವುದೇ ಪರಮ ಸುಖ ಅನ್ನಿಸಿಬಿಡುತ್ತೆ.

     ತಂತ್ರಜ್ಞಾನ ಎಷ್ಟೇ ಮೈಲುಗಲ್ಲುಗಳನ್ನು ದಾಟಿ ಬೆಳೆದರೂ ಜನರ ಯೋಚನಾ ಲಹರಿಯೇನು ಬದಲಾವಣೆಯಾಗಿಲ್ಲ ಅನಿಸಿಬಿಟ್ಟಿದೆ, ಉದಾಹರಣೆಗೆ ಯಾರನ್ನಾದರೂ ಮೊಬೈಲ್ ನಲ್ಲಿ ಎಸ್ ಎಂ ಎಸ್ ಮಾಡಿ ಯಾವುದಾದರೂ ಮದುವೆ ಅಥವಾ ಇನ್ಯಾವುದೋ ಶುಭ ಸಮಾರಂಭಕ್ಕೆ ಬನ್ನಿ ಎಂದು ಕಳುಹಿಸಿ ನೋಡಿ, ನೂರಕ್ಕೆ ತೊಂಬತ್ತು ಜನ ಬರುವುದಿಲ್ಲ.. ಉಚಿತ ಮೆಸೇಜ್ ಇದೆ ಎಂದು ಕಳುಹಿಸಿದ್ದಾರೆ ಎಂದು ಯೋಚಿಸುವವರೇ ಹೆಚ್ಚು, ಇನ್ನು ಇಮೇಲ್(ಮಿಂಚಂಚೆ) ನಲ್ಲಿ ಮಂಗಳ ಪತ್ರಿಕೆಯ ಸ್ಕ್ಯಾನ್ ಪ್ರತಿಯೊಂದಿಗೆ ಶುಭ ಕಾರ್ಯಕ್ಕೆ ಆಮಂತ್ರಣ ಕಳುಹಿಸಿದರೆ, ಏನು ಯೋಚನೆ ಮಾಡಬಹುದು?.. ಅದು ಸ್ಪ್ಯಾಮ್ ಲೆಖ್ಖಕ್ಕೆ ಬರುತ್ತದೆಯಂತೆ! ಎಲ್ಲರಿಗೂ ಕಳುಹಿಸಿದ್ದಾರೆ ಇದೊಂದು ಕರೆಯವಾ? ಇಡೀ ಲೀಸ್ಟಿಗೆ ಕಳುಹಿಸಿದ್ದಾರೆ ಉಹೂಂ ಇದಕ್ಕೆ ಬೆಲೆಯಿಲ್ಲವಂತೆ? ಒಬ್ಬರಿಗೆ ಕಳುಹಿಸಿದ್ದು ಮತ್ತೊಬ್ಬರಿಗೆ ಹೋಗಿದೆ ಎಂದು ಗೊತ್ತಾಗಬಾರದಂತೆ! ಅದಕ್ಕೆ To CC BCC ಅಂತಿರೋದು ಅಂತಾರೇನೋ.. ಲೀಸ್ಟ್ ತಯಾರಿಸುವುದು ನನ್ನಂತವನಿಗೆ ಕಷ್ಟದ ಕೆಲಸವೇ ಹೌದು, ಏಕೆಂದರೆ ಸೋಶಿಯಲ್ ನೆಟ್ ವರ್ಕಗಳಿಗೆ ಬೇರೆಯ ಮಿಂಚಂಚೆ ಮಾಡಿಕೊಂಡ ನನಗೆ ಅಲ್ಲಿಂದ ನನ್ನ ಸ್ವಂತ ಮಿಂಚಂಚೆ ವಿಳಾಸಕ್ಕೆ ಒಬ್ಬೊಬ್ಬರ ಮಿಂಚಂಚೆ ವಿಳಾಸ ಹುಡುಕಿ ಅವನ್ನೆಲ್ಲಾ ಒಂದುಕಡೆ ಬರೆದಿಟ್ಟುಕೊಂಡು ಮತ್ಯಾರದ್ದಾದರೂ ಬಿಟ್ಟುಹೋಗಿದೆಯಾ ನೋಡಿಕೊಳ್ಳಬೇಕು, ಅದೂ ಅಲ್ಲದೆ ಇಂಟರ್ನೆಟ್ ಸಹ ಆಮೆ ವೇಗದ್ದೇ ಆಗಿರೋದ್ರಿಂದ ಈ ಮೇಲು ಹೋಯ್ತೋ ಇಲ್ಲವೋ ಅಂತ ನೋಡಿಕೊಳ್ಳಬೇಕು, ಲೀಸ್ಟಿಗೆ ಕಳುಹಿಸಿದ್ದಾಯ್ತಲ್ಲಾ ಅಂತ ಸುಮ್ಮನಿರಲು ಸಾಧ್ಯವಾ ಅದೂ ಇಲ್ಲ, ಮಿಂಚಂಚೆ ಕಿಂಚಿತ್ ಬೆರಳ್ತಪ್ಪಿನಿಂದ ಮುದ್ರಿತವಾಗಿದ್ದರೆ ಸೀದಾ ವಾಪಸ್ಸು ಬಂದು ಬಿದ್ದಿರುತ್ತದೆ ಡೆಲಿವರಿ ಪೇಲ್ಡ್ ಅಂತ ಅದು ಯಾವ ವಿಳಾಸ ನೋಡಿಕೊಳ್ಳಬೇಕು, ಒಬ್ಬೊಬ್ಬರಿಗೆ ಬೇರೆ ಬೇರೆಯಾಗಿ ಮಿಂಚಂಚೆ ಮಾಡುತ್ತಾ ಕುಳಿತಿದ್ದರೆ ಮುದುವೆ ಮಂಟಪಕ್ಕೆ ಹೋಗುವ ತನಕವೂ ಕಂಪ್ಯೂಟರಿನ ಮುಂದೆ ಕುಳಿತು ಬಿಡಬೇಕಿತ್ತೇನೋ.... ಮದುವೆಯಂತ ಕಾರ್ಯಕ್ರಮಗಳಲ್ಲಿ ಅತಿ ಮುಖ್ಯವಾದವರನ್ನೇ ಕರೆಯಲು ಮರೆತುಹೋಗುವಂತಹದ್ದೂ ಸಹ ಇಲ್ಲೆವೆಂದಿಲ್ಲ. ಇನ್ನು ಕೆಲವು ಕಡೆ ಫೋನ್ ನಲ್ಲಿ ಕರೆದರೂ ಬಾರದವರಿದ್ದಾರೆ, ಫೋನಲ್ಲಿ ಕರದಿದ್ದಾರೆ, ನಮಗೇನು ಬೆಲೆಯೇ ಇಲ್ಲವಾ , ಫೋನ್ ನಲ್ಲಿ ಕರೆಯೋದೊಂದು ಅಕ್ಷಮ್ಯ ಅಪರಾಧ, ಮನೆಗೇ ಬಂದು ಕರೆಯಬೇಕಾಗಿತ್ತು ಎನ್ನುವುದು ಅವರ ಆಕ್ಷೇಪಣೆ.

     ಸೌಲಭ್ಯಗಳಿರುವುದೇ ಬಳಸಿಕೊಳ್ಳುವುದಕ್ಕಾಗಿ, ಈಮೇಲ್ ಚಾಟ್ ಗಳು ಇನ್ನೂ ಹರಟೆಗಷ್ಟೇ ಸೀಮಿತವಾಗಿರುವುದೇ ವಿಪರ್ಯಾಸ, ಶುಭ ಕಾರ್ಯಗಳ ಮಂಗಳ ಪತ್ರ(ಇನ್ವಿಟೇಶನ್) ಲಗತ್ತಿಸಿ ಕಳುಹಿಸಿದರೇ ಅದೂ ಸಹ ನೇರವಾಗಿ ಕರೆಯೋಲೆ ಕೊಟ್ಟಂತೆ ಅಲ್ಲವಾ? ಮೊಬೈಲ್ ಮೆಸೇಜಿಗೂ ಸಹ ಕಾಲ್ ನಷ್ಟೇ ಮಹತ್ವವಿಲ್ಲವಾ? ಮೆಸೇಜು ಸಹ ಅದೇ ವ್ಯಕ್ತಿಯ ಮೊಬೈಲಿನಿಂದ ಬಂದಿದ್ದು ಅಂದ ಮೇಲೆ ಅದು ಸಹ ಅದಿಕೃತವೇ ಅಲ್ಲವೇ? ಪ್ರತಿಯೊಬ್ಬರನ್ನೂ ಮನೆಗೇ ಹೋಗಿ ಕರೆದಾಗಲೂ ಅವರಿಲ್ಲವೆಂದು ಮತ್ತೆ ಮತ್ತೆ ಮೂರ್ನಾಲ್ಕು ಭಾರಿ ಕರೆಯುವುದು ಸಾಧ್ಯವಾ? ಮನೆಗೆ ಪತ್ರಿಕೆ ಕೊಟ್ಟಿದ್ದಾರೆ ತಾನು ಬರುವ ತನಕ ಕಾಯಬೇಕಿತ್ತು ಅನ್ನುವುದು ಎಷ್ಟು ಸರಿ.ಎಲ್ಲವೂ ಕಲ್ಪಿಸಿಕೊಂಡೂ ಬರೆದದ್ದಲ್ಲ, ಅನುಭವಕ್ಕೆ ಬಂದವುಗಳೇ ಆಗಿವೆ. ಆಗಿದ್ದೆಲ್ಲವೂ ಒಳ್ಳೆಯದಕ್ಕೆ ಎಂದು ಸುಮ್ಮನಾಗೋದೆ ಒಳ್ಳೇದೇನೋ ಅನಿಸಿಬಿಡುತ್ತೆ.

ಹಾಂ ನಾಳೆ ಅಂದರೆ ಮಾರ್ಚ 11ಕ್ಕೆ ನನ್ನ ಮಗಳು "ನಿಧಿ"ಯನ್ನು ಮೊದಲಬಾರಿಗೆ ಮನೆಗೆ ಕರೆದುಕೊಂಡು ಬರುತ್ತಿದ್ದೇನೆ ಅವಳ ಅಜ್ಜನ ಮನೆಯಿಂದ, ನಿಮ್ಮೆಲ್ಲರ ಹಾರೈಕೆ ಬೇಕು ಅವಳ ಮೇಲೆ, ಮಕ್ಕಳಂದ ತಕ್ಷಣ ಎಷ್ಟು ಖುಷಿ ಇರುತ್ತೆ... ಈಗಂತೂ ಚಂದ ಚಂದದ ಬಟ್ಟೆಗಳನ್ನು ತೊಡಿಸಿ ಸಂತೋಷ ಪಡಬಹುದು... ಸಮಯ ಹೋದದ್ದೆ ಗೊತ್ತಾಗೋದಿಲ್ಲ... ಮಕ್ಕಳ ಜೊತೆಯಲ್ಲಿ ನಾವು ಸಹ ಚಿಕ್ಕವರಾಗಬಹುದೇನೋ.. ಸಿರಸಿಯಲ್ಲಿ ಜಾತ್ರೆ ಆರಂಭವಾಗಿದೆ, ಮಗಳಿಗೆ ಆಟಿಕೆ ತರುವ ನೆಪದಲ್ಲಿ ಸುತ್ತಿ ಬರಬಹುದೇನೋ ಅನ್ನಿಸುತ್ತಿದೆ, ಅಂತೆಯೇ ಅಂಗಡಿಗಳಲ್ಲಿರುವ ಕಾರು ಬೈಕು ಇಮಾನ, ಹೂಂ ವಿಮಾನ ಅಲ್ಲ ಇಮಾನನೇ ಅದು, ಎಲ್ಲವನ್ನೂ ತರಬೇಕು.... ಬನ್ನಿ ಸಿರಸಿ ಜಾತ್ರೆ ಒಂದು ಸುತ್ತು ಸುತ್ತಾಡಿ ಬರೋಣ ಏನಂತೀರಾ........

Thursday 29 September 2011

ಮೌನ ಮಾತಾಡಿದಾಗ

ಮಾತೊಂದೆ ಎಲ್ಲವೂ ಅಲ್ಲ

ಮೌನವೇ ಎಲ್ಲ ಅಂದವರೇ ಮೌನವಾಗೊಲ್ಲ

ಮಾತು ಸಾಕಾದಾಗ ಮೌನ ಹಿತ

ಮೌನ ಹೆಚ್ಚಾಗಿ ಕೊರೆದಾಗ ಮಾತೇ ಸುಖ


ಭಾವನೆಗಳ ವ್ಯಕ್ತ ಪಡಿಸುವ ಪರಿ ನೀ ತಿಳಿ

ಮೌನದಲಿ ಅವ್ಯಕ್ತವಾದ ಭಾವನೆಯು ಕಣ್ಣಲ್ಲಿ ವ್ಯಕ್ತವಾಗಲಿ

ಮಾತಾಡಿ ಕೊಲ್ಲಬೇಡ, ಮೌನವಾಗಿ ಕೊರಗಬೇಡ



ಎಲ್ಲದಕು ನಗಬೇಡ, ಇಲ್ಲದಕೆ ಅಳಬೇಡ

ಮಾತೇ ಎಲ್ಲವು ಅಲ್ಲ, ನೀ ಅತಿ ಮೌನಿಯಾಗಬೇಡ

ಮಾತು ಮೌನದ ನಡುವೆ ಅಂತರ ನಿರಂತರ

ಮೌನ ನೀ ಮಾತಾಡು, ಮಾತೇ ಮಾತು ನೀ ಮೌನಿಯಾಗು.

Tuesday 5 July 2011

ಚಿತ್ರರಂಗದ ಬಗ್ಗೆ ಒಂದಿಷ್ಟು ತಿಳಿದಷ್ಟು ಮತ್ತು ಅಮೃತ ಘಳಿಗೆ ಚಲನ ಚಿತ್ರದಲ್ಲಿ ಬಾಲನಟನಾಗಿ ನನ್ನ ಅಭಿನಯ!

     ನನ್ನೊಳಗಿನ ಬರಹಗಾರ ಅನಾಮತ್ತಾಗಿ ತಲೆಗೆ ಕೈ ಕೊಟ್ಟು ಕುಂಭಕರ್ಣನಂತೆ ದೀರ್ಘ ನಿದ್ರೆಗೆ ಜಾರಿದ್ದನೇನೋ ಎನ್ನುವ ಅನುಭವ,ಅಲ್ಲಾಡಿಸಿದರೂ ಏಳಲು ಒಪ್ಪದ ಜಾಯಮಾನದ ಆತ ನಿನ್ನೆ ಇಂದ ಒಂದೇ ಸಮನೆ ಸುರಿಯುತ್ತಿರುವ ಮಲೆನಾಡಿನ ಜಡಿ ಮಳೆಯ ದೊಡ್ಡ ದೊಡ್ಡ ಹನಿ ಮೈಗೆ ಸಿಡಿದಿರಬೇಕು.. ತಟಪಟ ಸದ್ದು ಕಿವಿಗೆ ಬಿದ್ದಿರಬೇಕು, ಮೈ ಕೈ ಮುರಿಯುತ್ತಾ ಎದ್ದು ಕುಳಿತಂತೆ ಅನ್ನಿಸುತ್ತಿದೆ, ಪೀಠಿಕೆ ಅತಿಯಾಗುತ್ತಿದೆ ಅನ್ನಿಸುವ ಮೊದಲು ಲೇಖನ ಆರಂಭಿಸಿ ಬಿಡುತ್ತೇನೆ




     ಚಿತ್ರ ಜಗತ್ತು ಅನ್ನೋದು ಚಿತ್ರ, ವಿಚಿತ್ರ, ಅದ್ಬುತ, ವಿಸ್ಮಯ, ರೋಮಾಂಚನ, ನೋವು, ನಲಿವು, ದುಃಖ, ಕಷ್ಟ, ಸುಖ, ಹೆಸರು, ಕೀರ್ತಿ, ಹಣ, ಯಶಸ್ಸು, ಎಲ್ಲವನ್ನೂ ಒಟ್ಟೋಟ್ಟಿಗೆ ನೀಡಬಲ್ಲದು, ಆದರೂ ಚಿತ್ರ ಜಗತ್ತಿನ ಆಳ ಅಷ್ಟು ಸುಲಭವಾಗಿ ಅರಿವಾಗೋದಿಲ್ಲ, ಆದರೂ ಗೊತ್ತಿರುವಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ.

     ನಾನು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಅಮೃತ ಘಳಿಗೆ ಚಲನಚಿತ್ರದಲ್ಲಿ ಶ್ರೀಧರ ನ ಮಗನಾಗಿ ಅಭಿನಯಿಸಿದ್ದೇನೆ, ನಮ್ಮ ಊರಿನ ರಾಮಯ್ಯನವರ ಹಳೆಯ ಕಾಲದ ಮನೆಯಲ್ಲಿ ಶ್ರೀಧರ ನ ಮನೆಯ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು... ನಾನು ಅಭಿನಯಿಸಿದ ದೃಶ್ಯ - ಮೂರುಗಾಲಿಯ ಚಿಕ್ಕ ಗಾಡಿಯನ್ನು ದೂಡಿಕೊಂಡು ಹೋಗುವ ಪುಟ್ಟ ಮಗುವಿನ ಪಾತ್ರ! ನನಗಾಗ ಎರಡು ವರ್ಷ ವಾಗಿತ್ತು! ಇನ್ನೊಂದು ಚಾನ್ಸ್ ಕೊಡಿ ಅಂತ ಕೇಳೋಕು ಗೊತ್ತಾಗಲೇ ಇಲ್ಲ! ಪಾಪ ಅಂದ್ರಾ? ಹೂಂ ನಾನು ಪಾಪುನೇ ಆಗಿದ್ದೆ! ಅಂದಹಾಗೆ ಆ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅಲೋಕ ಎಂದಾಗಿತ್ತು, ಇಂದಿಗೂ ಸಹ ನಮಗೆ ಆಪ್ತರಾದ ಕುಂಟಗೋಡಿನ ಗಣಪತಿಯವರು ನನ್ನನ್ನು ಕಂಡಾಗೆಲ್ಲಾ ಅಲೋಕ್ ಎಂದೇ ಕರೆಯುತ್ತಾರೆ, ಅನೇಕರು ಗೊತ್ತಿಲ್ಲದೇ ಹೋದವರು ಅಲೋಕ್ ಅಲ್ಲ ಆದಿತ್ಯ ಅಂದರೂ ಸಹ "ಗೊತಿದಾ ಅವ ನಮ್ಮ್ ಅಲೋಕ್" ಎಂದೇ ಹೇಳುತ್ತಾರೆ, ಮೊನ್ನೆ ಹೀಗೆ ಆಯಿತು, ನನ್ನ ಹೆಂಡತಿ ಸೋದರ ಮಾವನ ಮನೆಗೆ ಹೋಗಿದ್ದಳು ಅಲ್ಲಿಗೆ ಗಣಪತಣ್ಣ ಬಂದಿದ್ದರಂತೆ ಅಲ್ಲಿ ಓಹ್ ಅಲೋಕ ನ ಹೆಂಡ್ತಿ ಅಲ್ದಾ ಕೇಳಿದರಂತೆ! ಅಲ್ಲಿದ್ದವರಿಗೆಲ್ಲಾ ಏನು ಅರ್ಥವಾಗದೆ ಕಕ್ಕಾಬಿಕ್ಕಿಯಾಗಿ ನೋಡಿದರಂತೆ, ನನ್ನ ಹೆಂಡತಿಗೆ ಮುಂಚೆಯೇ ನಾನು ತಿಳಿಸಿದ್ದರಿಂದ ಅವಳು ಎಲ್ಲರಿಗೂ ಅಮೃತಗಳಿಗೆ ಸುದ್ದಿ, ಅಲೋಕ ಅಂತಲೇ ಕರೆಯೋದು ಗಣಪತಣ್ಣ ಅಂತ ವಿವರಿಸಿದ ಮೇಲೆ ಎಲ್ಲರಿಗೂ ಅರ್ಥವಾಗಿಯಿತಂತೆ.

     ಚಿತ್ರರಂಗ ಹೀಗಿದೆ ಅಂತ ಹೇಳೋದು ಕಷ್ಟ, ಅಲ್ಲಿ ಎಲ್ಲರೂ ಒಂದಾಗಿ ದುಡಿದರೆ ಮಾತ್ರ ಗೆಲುವು, ಅಲ್ಲಿ ಹೀರೋ, ಹೀರೋಯಿನ್ ಗೆ ಆಕ್ಟಿಂಗ್ ಒಂದು ಬಂದರೆ ಆಗೋದಿಲ್ಲ, ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ, ಲೈಟ್ ಬಾಯ್ ನಿಂದ ಹಿಡಿದು ಎಲ್ಲರೂ ಎಲ್ಲರೂ ನುರಿತ ಕೆಲಸಗಾರರಾಗಿರಬೇಕು, ಯಾರೇ ಒಬ್ಬರು ಶ್ರದ್ದೆಯಿಂದ ಕೆಲಸ ಮಾಡದೇ ಹೋದರೆ ಚಿತ್ರದಲ್ಲಿ ಎಡವಟ್ಟಾಗೋದು ಗ್ಯಾರಂಟಿ. ಉದಾಹರಣೆಗೆ, ಹೀರೋ ಮತ್ತು ಹೀರೋಯಿನ್ ಹೊಟೆಲ್ ನಲ್ಲಿ ಕುಳಿತು ಶರಬತ್ತು, ಅದೇ ಜೂಸ್ ಹೀರುತ್ತಾ ಮಾತನಾಡುವ ದೃಶ್ಯ,ದೃಶ್ಯ ಒಂದೇ ಟೇಕ್ ನಲ್ಲಿ ಸಾಧ್ಯವಿಲ್ಲವಾದರೆ ಪ್ರತಿಯೊಂದನ್ನು ಬರೆದುಕೊಳ್ಳಬೇಕಾಗುತ್ತದೆ, ಟೇಬಲ್ ಮೇಲೆ ಏನೇನು ಇತ್ತು, ನಾಯಕಿ ಹೀರುತ್ತಿದ್ದ ಜ್ಯೂಸ್ ನ ಬಣ್ಣ ಯಾವುದು, ಎಷ್ಟು ಇತ್ತು, ಸ್ಟ್ರಾ ಬಣ್ಣ ಯಾವುದು, ಅವಳು ದರಿಸಿದ್ದ ಬಟ್ಟೆಯ ಬಣ್ಣ ಯಾವುದು ಎಲ್ಲವನ್ನು ಯಥಾವತ್ ಬರೆದಿಟ್ಟುಕೊಳ್ಳಬೇಕು, ಇಲ್ಲವಾದರೆ ಅರ್ಧ ಚಿತ್ರೀಕರಣವಾಗಿ ಮತ್ತೊಂದು ದಿನ ಮುಂದಿನ ಭಾಗ ಚಿತ್ರೀಕರಣ ಮಾಡುವಾಗ ಆರೇಂಜ್ ಜ್ಯೂಸ್ ನ ಬದಲಾಗಿ ಮರೆತು ಕೋಕ್ ಬಾಟಲಿಯನ್ನು ಇಟ್ಟರೆ, ಮೊದಲು ಆರೇಂಜ್ ಜ್ಯೂಸ್ ಕುಡಿಯುತ್ತಿದ್ದ ನಟಿ, ಹೀರೋ ಮಾತನಾಡಿ ಮುಗಿಸಿ ಮತ್ತೆ ಮಾತಾಡುವಾಗ ಆಕೆಯ ಕೈನಲ್ಲಿ ಕೋಕ್ ಬಾಟಲಿ ಬಂದಿರುತ್ತದೆ!



     ಅನೇಕ ಚಿತ್ರಗಳು ಪೋಷಕ ನಟರ, ಹಾಸ್ಯ ನಟರ ಕೊರತೆಯಿಂದ ಚಿತ್ರ ಯಶಸ್ವಿಯಾಗೋದಿಲ್ಲ, ಚಿತ್ರ ಚನ್ನಾಗಿಲ್ಲ ಎಂದು ಮೊದಲ ಶೋ ನೋಡಿ ಹೊರಬಂದವರು ಹೇಳಿದರೆ ಮುಗಿಯಿತು, ಚಿತ್ರ ಮಕಾಡೆ ಮಲಗುತ್ತೆ ಅನ್ನೋದು ಮತ್ತೆ ಹೇಳಬೇಕಾಗಿಲ್ಲ, ಪತ್ರಿಕೆಗಳಲ್ಲಿ ಬರುವ ಚಿತ್ರ ವಿಮರ್ಶೆಗಳಲ್ಲಿ ಚಿತ್ರ ವಿಮರ್ಶಕ ತನ್ನ ಮೂಗಿನ ನೇರಕ್ಕೆ ಚಿತ್ರದಲ್ಲಿ ಹುರುಳಿಲ್ಲ, ನಾಯಕ ನಟನಿಗೆ ತಲೆಯಲ್ಲಿ ಹುಲುಸಾಗಿ ಕೂದಲೊಂದು ಬೆಳೆದಿದೆ, ಚಿತ್ರ ತರಬೇತಿಯ ಜೊತೆ ಕಟಿಂಗ್ ಶಾಫಿಗೂ ಹೋಗಿಬರಬೇಕು, ದುಡ್ಡು ಕೊಟ್ಟು ನೋಡುವ ಚಿತ್ರವಲ್ಲ ಎಂದು ಬರೆದರೆ ಹೇಗಾಗಬೇಡ, ಅತಿ ಹೆಚ್ಚಿನ ಜನರು ಚಿತ್ರ ವಿಮರ್ಶೆಗಳನ್ನು ಓದುತ್ತಾರೆ ಮತ್ತು ನಂಬುವವರೇ ಹೆಚ್ಚು. ಇನ್ನು ಗಾಂಧೀನಗರ ಕನ್ನಡ ಚಿತ್ರರಂಗದ ಅವಿಭಾಜ್ಯ ಅಂಗ, ಅಲ್ಲಿಯೇ ಗಾಸಿಪ್ಪುಗಳು ಹುಟ್ಟೋದು, ಗಾಂಧೀನಗರ ಏನು ಮಾತಾಡಿಕೊಳ್ಳುತ್ತೆ ಎನ್ನೋದು ಮುಖ್ಯವಾಗಿ ಬಿಡುತ್ತದೆ.



ಇನ್ನು ಸ್ಟಾರ್ ನಂ ೧ ಪಟ್ಟ ನಾಯಕ ನಾಯಕಿಯರಿಗೆ ಸದಾ ಇರುತ್ತೆ ಅಂತ ಹೇಳೋಕ್ಕೆ ಆಗೋದಿಲ್ಲ, ಅನೇಕ ಕಾರಣಗಳಿಂದ, ಉದಾಹರಣೆಗೆ ಹೊಸ ಮುಖ, ಹೊಸ ಪ್ರತಿಭೆ, ಹೆಚ್ಚು ಜನಪ್ರಿಯತೆ ಪಡೆದರೆ ಸ್ಟಾರ್ ಪಟ್ಟ ಅವರದ್ದಾಗುತ್ತೆ, ಇನ್ನು ನಟಿಯರು ಸ್ವಲ್ಪ ಡುಮ್ಮಿಯರಾದರೂ, ಫಿಟ್ ನೆಸ್ ಕೊರತೆಯಿದ್ದರೆ ನಂ ೧ ಪಟ್ಟ ಕೈಬಿಟ್ಟು ಹೋದಂತೆ. ಬ್ಯೂಟಿ ವಿದ್ ಬ್ರೈನ್ ಅಂತಾರಲ್ಲ ಅದು ಇರಬೇಕು, ಎಲ್ಲಕ್ಕಿಂತ ಮುಖ್ಯವಾಗಿ ನಾಯಕ/ನಾಯಕಿಗೆ ಅಭಿನಯ ಚಾತುರ್ಯತೆ ಇರಬೇಕಾಗುತ್ತದೆ!

     ಹಿಂದಿನ ಕಾಲದಲ್ಲಿ ಡಬಲ್ ರೋಲ್ಗಳನ್ನು ಚಿತ್ರೀಕರಣ ಮಾಡುವುದು ಸುಲಭವಾಗಿರಲಿಲ್ಲ, ಡಬಲ್ ರೋಲ್ ಚಿತ್ರೀಕರಣ ಛಾಯಾಗ್ರಾಹಕನಿಗೊಂದು ಸವಾಲೇ ಆಗಿತ್ತು, ಒಂದು ದ್ವಿಪಾತ್ರದ ಚಿತ್ರೀಕರಣ ಮಾಡಬೇಕಿದ್ದಲ್ಲಿ ಕ್ಯಾಮರಾ ಲೆನ್ಸ್ ನ ಒಂದು ಭಾಗವನ್ನು ಎಕ್ಸ್ಪೋಸ್ ಆಗದಂತೆ ಮುಚ್ಚಿ ಚಿತ್ರೀಕರಿಸಬೇಕಿತ್ತು, ನಂತರ ಚಿತ್ರೀಕರಣವಾದ ಸೈಡನ್ನು ಮುಚ್ಚಿಕೊಂಡು ರಿವೈಂಡ್ ಮಾಡಿ ಮತ್ತೊಂದು ಪಾತ್ರದ ಚಿತ್ರೀಕರಣ ಮಾಡುತ್ತಿದ್ದರು, ಅದಕ್ಕೆ ಹಳೆಯ ಚಿತ್ರಿಗಳನ್ನು ನೋಡಿ ದ್ವಿಪಾತ್ರಭಿನಯದಲ್ಲಿ ಆ ಇಬ್ಬರು ಏಕವ್ಯಕ್ತಿಗಳ ನಡುವೆ ಗೆರೆಯೊಂದು ಮೂಡಿರುತಿತ್ತು! ಎರಡೂ ಪಾತ್ರಗಳನ್ನು ಒಟ್ಟೊಟ್ಟಿಗೆ ತೋರಿಸುತ್ತಿರಲಿಲ್ಲ, , ಅವರಿಬ್ಬರು ಅಣ್ಣ ತಮ್ಮಂದಿರೆಂದು ಗೊತ್ತಾಗಿ ಅಪ್ಪಿಕೊಳ್ಳುವ ದೃಶ್ಯವಿದ್ದಾಗ ಏನು ಮಾಡುವುದು? ಒಬ್ಬರನ್ನೊಬ್ಬರು ತಬ್ಬಿಕೊಂದು ಅಳುವಾಗ ಹೀರೊನನ್ನೆ ಹೋಲುವ ಮತ್ತೊಬ್ಬ ವ್ಯಕ್ತಿಯ ಬೆನ್ನು ತೋರಿಸುತ್ತಿದ್ದರು.ಹಿಂದೆ ಈಗಿರುವಂತೆ ಮಿಕ್ಸಿಂಗ್ ತಂತ್ರಜ್ಞಾನಗಳು ಬಂದಿರಲಿಲ್ಲ,ಈಗಿನ ಗ್ರಾಫಿಕ್ಸ್ ಅನಿಮೇಷನ್ ಯುಗದಲ್ಲಿ ಏನು ಬೇಕಾದರು ಸುಲಭವಾಗಿ ಮಾಡಬಹುದು.ಇಬ್ಬರಲ್ಲ ಎಷ್ಟು ದ್ವಿಪಾತ್ರ, ತ್ರಿಪಾತ್ರಗಳನ್ನಾದರು ನೈಜ ಅನ್ನಿಸುವಷ್ಟರ ಮಟ್ಟಿಗೆ ಒಟ್ಟೊಟ್ಟಿಗೆ ತೆರೆಯ ಮೇಲೆ ಮೂಡಿಸಬಹುದು.



ಹಳೆಯ ಚಲನಚಿತ್ರಗಳ ಹಾಡುಗಳು ಸುಮಧುರವಾಗಿರುತ್ತಿದ್ದವು, ಹಾಡಿಗೊಂದು ಸಾಹಿತ್ಯವಿರುತ್ತಿತ್ತು, ಅರ್ಥವಿರುತ್ತಿತ್ತು, ಕ್ಯಾಬರೇ ಹಾಡುಗಳು ಸಹ ಮಧುರವಾಗಿರುತ್ತಿದ್ದವು, ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು..., ನಂತಹ ಹಾಡುಗಳು ಹಿತವಾಗಿದ್ದವು,..



     ಈಗಿನ ಕಾಲದ ಹಾಡುಗಳು ಕೆಲವು ಅರ್ಥವಾಗುವುದಿರಲಿ, ಯಾವ ಭಾಷೆಯಲ್ಲಿ ಹಾಡುತ್ತಿದ್ದಾರೆ ಎಂದು ತಿಳಿಯಲು ಎರಡು ನಿಮಿಷಗಳು ಬೇಕು. ಇನ್ನು ಕ್ಯಾಬರೇ ನರ್ತಕಿಯರೇ ಬೇರೆ ಇರುತ್ತಿದ್ದರು, ಈಗಿನಂತೆ ಹಿರೋಯಿನ್ ಗಳೇ ತಾವೆ ಐಟಂ ಸಾಂಗ್ ಗೆ ಕುಣಿಯಲು ತಯಾರಿರುತ್ತಿರಲಿಲ್ಲ, ಈಗ ಊರಿಗೊಬ್ಬಳೆ ಪದ್ಮಾವತಿ ಮುಂತಾದ ಹಾಡಿಗೆ ಹಿರೋಯಿನ್ ಗಳೆ ಕುಣಿಯಲು ಸಿದ್ದರಾಗಿದ್ದಾರೆ. ಹಳೆಯ ಹಾಡುಗಳನ್ನು ನೆನೆಸಿಕೊಳ್ಳುತ್ತಿರುವುದರ ನಡುವೆ ಇಲ್ಲಿ ನನಗೆ ತಕ್ಷಣಕ್ಕೆ ನೆನಪಿಗೆ ಬಂದಿದ್ದು ಮೈಸೂರು ಆನಂದ್ ರವರ ದಶಕಗಳ ಹಿಂದಿನ ಹಳೆಯ ಕಾಲದ ಹಾಡುಗಳು ಹೇಗಿದ್ದವು ಈಗ ಹೇಗಿದೆ ಎನ್ನುವುದರ ಏಕಪಾತ್ರಾಭಿನಯ, ಆಗಿನ ಕಾಲದಲ್ಲಿ ಕ್ಯಾಮರಾಗಳು ಈಗಿನಂತೆ ಇರಲಿಲ್ಲವಂತೆ ನಿರ್ದೇಶಕರು ಹೇಳುತ್ತಿದ್ದರಂತೆ ನೋಡಮ್ಮ ಒಂದೇ ಕ್ಯಾಮರ ಇರೋದು ಅದರ ಎದುರು ನೀನು ಕಾಲುಗಳನ್ನು ಕುಣಿಸುತ್ತಾ(ಮೈ ಕುಲಕಿಸಬೇಕು ಎಂದು ಮತ್ತೆ ಆಕೆಗೆ ಹೇಳಬೇಕಾಗಿರಲಿಲ್ಲವೇನೋ!) ಬಲಗಡೆಯಿಂದ ಎಡಕ್ಕೆ ಹಾಗು ಬಲಕ್ಕೆ ಸ್ವಲ್ಪ ನೆಡೆದು ಮತ್ತೆ ಎಡಕ್ಕೆ ಬರಬೇಕು ಎಂದು! ಅಂತೆಯೆ ರಜಕುಮಾರ್ ಗೆ ಬೇಡರ ಕಣ್ಣಪ್ಪ ದ ಹಾಡಿನ ಚಿತ್ರೀಕರಣದಲ್ಲಿ ಹೇಳಿದ್ದರಂತೆ ಕ್ಯಾಮರ ನಿಮ್ಮ ಎದುರು ಮಾತ್ರವಿರುತ್ತದೆ ಬರಿ ಕೈ ಮೇಲೆ ಕೆಳಗೆ ಮಾಡುತ್ತಾ ಹಾಡಿದರೆ ಸಾಕು ಎಂದು! ಆಗ ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿದೇವ ಹಾಡುತ್ತ ಬಲಗೈ ಮೇಲೆ ಕೆಳಗೆ ಆಡಿಸಿದ್ದು ಸಹ ಅದ್ಬುತವಾಗಿ ಮೂಡಿಬಂದಿತ್ತು ಅಣ್ಣಾರವರ ಅಭಿನಯ. ಇನ್ನು ಈಗಿನವರು ಜನಸಾಮಾನ್ಯರ ಹೆಸರಿನ ಮೇಲೆ ಆಹ ಅವನ ಕಣ್ಣು ನನ್ನ ಮೇಲೆ, ಅಂತ ಹಾಡಿಬಿಡುತ್ತಾರಂತೆ, ಇದನ್ನು ನಾನು ಹೇಳುವುದಕ್ಕಿಂತ ಎಲ್ಲಾದರೂ ಟಿವಿಯಲ್ಲಿ ಮೈಸೂರು ಆನಂದ್ ಅವರ ಕಾರ್ಯಕ್ರಮ ಪ್ರಸಾರವಾದಗ ನಾನು ಬರೆದದ್ದನ್ನು ನೆನಸಿಕೊಳ್ಳಿ.

     ಇನ್ನು ಚಿತ್ರೀಕರಣಕ್ಕೆ ಅತೀ ಹೆಚ್ಚಿನ ದುಡ್ಡು ಸುರಿಯುವವರ ಸಾಲಿನಲ್ಲಿ ಬರುವ ಮೊದಲ ಹೆಸರು ರವಿಚಂದ್ರನ್. ಪ್ರೇಮಲೋಕದಂತ ಅದ್ಬುತ ಚಿತ್ರವನ್ನು ಬೆಳ್ಳಿ ತೆರೆಯ ಮೇಲೆ ಮೂಡಿಸಿದಾತ, . ಕಾರು ಸುಡುವ ದೃಶ್ಯವಿದ್ದರೆ ಹೊಸ ಕಾರನ್ನು ಕೊಂಡು ತಂದು ಸುಟ್ಟರೂ ಅದೇನು ವಿಶೇಷವಲ್ಲ! ಅದೇ ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ಪೆಷಾಲಿಟಿ, ಹಾಳು ಮಾಡುವುದಕ್ಕಂತಲೆ ಕೋಟಿ ಕೋಟಿ ಸುರಿಯಲು ಹಿಂಜರಿಯದ ಜಾಯಮಾನ ರವಿಚಂದ್ರನ್ ನದು. ಹೊಸ ಹೊಸ ಹೀರೋಯಿನ್ ಗಳನ್ನು ಅಮದು ಮಾಡಿಕೊಂಡು ಜೊತೆ ಮರಸುತ್ತುವ ದೃಶ್ಯಗಳಲ್ಲಿ ಅಭಿನಯಿಸುವ ರಸಿಕ,ರವಿಚಂದ್ರನ್ ಅಪ್ಪ ನಿರ್ದೇಶಕ ಎನ್ ವೀರಾಸ್ವಾಮಿ ಇದ್ದಿದ್ದರೆ ಎಷ್ಟು ಬಾರಿ ಹೃದಯಾಘಾತವಾಗುತ್ತಿತ್ತೋ ಏನೋ ಮಗ ಮಾಡುವ ಖರ್ಚು ವೆಚ್ಚಗಳನ್ನು ನೋಡಿ! ಆದರೂ ಏನೇ ಪ್ರಯೋಗಗಳಿರಲಿ ಏನಿದ್ದರೂ ಕನ್ನಡಕ್ಕೆ ಮಾತ್ರ ಸೀಮಿತ ಎನ್ನುವುದು ರವಿಚಂದ್ರನ್ ನೋಡಿ ಅನೇಕರು ಕಲಿಯಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.

ಚಿತ್ರರಂಗದ ಬಗ್ಗೆ ನನಗೆ ಗೊತ್ತಿಲ್ಲದ ವಿಚಾರಗಳು ಇನ್ನೂ ಅನೇಕವಿದೆ, ಗೊತ್ತಿಲ್ಲದ ವಿಚಾರಗಳನ್ನು ಕಲ್ಪಿಸಿಕೊಂಡು ಬರೆಯುವುದು ಸರಿಯಲ್ಲ, ಸೆಟ್ ಗಳ ಬಗ್ಗೆ ಫಿಲಂ ಸಿಟಿಗಳ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ಎಷ್ಟೋ ಪುಟಗಳು ತುಂಬಿಹೋಗುತ್ತವೆಯೋ.. ಇಷ್ಟವಾಗಿದೆ ಬರವಣಿಗೆ ಅಂದು ಕೊಳ್ಳುತ್ತೇನೆ.


ಅಂದಹಾಗೆ, ಕೊನೆಯ ಮಾತು ನಿಮ್ಮ ಅನಿಸಿಕೆ ತಿಳಿಸಿ ಲೇಖನ ಹೇಗಿದೆ ಎಂದು.



Friday 27 May 2011

ಸಾವಯವ ಕೃಷಿಯ ಬಗೆಗೆ ನಮಗೆಷ್ಟು ಗೊತ್ತು?

    ಸಂಪೂರ್ಣ ಸಾವಯವ ಕೃಷಿ ಈಗಿನ ಆಧುನಿಕ ಕೃಷಿಯಲ್ಲಿ ಸಾಧ್ಯವಾ? ರೋಗ ಭಾದೆಯಿಂದ/ ಹುಳ ಹುಪ್ಪಟೆಗಳ ಉಪಟಳದಿಂದ ಪಾರಾಗಲು ಸಾವಯವ ವಿಧಾನದಿಂದ ಸಾಧ್ಯವಿದೆಯಾ?

ರಾಸಾಯನಿಕ ಗೊಬ್ಬರ ಬಳಕೆ ಇಲ್ಲದೆ ಕೃಷಿ ಸಾಧ್ಯವಿಲ್ಲವಾ?? ಅನೇಕ ಪ್ರಶ್ನೆಗಳು ನಮ್ಮನ್ನು ಕಾಡುತ್ತದೆ, ಅದೇ ರೀತಿ ಅಡಿಕೆ ಬೆಳೆಗೆ ಎಂಡೋ ಸಲ್ಫಾನ್ ನಂತ ಅಪಾಯಕಾರಿಯಾದ ಭೂಮಿಯಲ್ಲಿ ಅನೇಕ ತಲೆಮಾರುಗಳು ಕಳೆದರೂ ನಾಶವಾಗದೆ ಮುಂದಿನ ಪೀಳಿಗೆಯನ್ನೇ ಅಂಗವಿಕಲರನ್ನಾಗಿ ಮಾಡುವ ಎಂಡೋ ಸಲ್ಫಾನ್ ಕೀಟನಾಶಕ ಬಳಕೆ ಅಷ್ಟು ಅವಶ್ಯವಾ?

     ಉತ್ತರ ಅಷ್ಟೊಂದು ಸುಲಭವಲ್ಲ. ರಾಸಾಯನಿಕ ಗೊಬ್ಬರಗಳು ಅನಿವಾರ್ಯವೇನಲ್ಲ, ಇನ್ನು ಮಲೆನಾಡಿನ ಹಲವು ಅಡಿಕೆ ಕೃಷಿಕರು ತಮ್ಮ ತೋಟಗಳಿಗೆ ಈವತ್ತಿನವರೆಗೂ ಕೊಟ್ಟಿಗೆ ಗೊಬ್ಬರವನ್ನು ಬಿಟ್ಟು ಯಾವ ರಾಸಾಯನಿಕ ಗೊಬ್ಬರವನ್ನೂ ತಮ್ಮ ತೋಟಗಳಿಗೆ ಒದಗಿಸಿಲ್ಲ, ಪೋಷಕಾಂಶದ ಕೊರತೆಯಿಂದ ಫಸಲಿನಲ್ಲಿ ಹಾನಿಮಾಡಿಕೊಂಡವರು ಕಡಿಮೆಯೇನಿಲ್ಲ. ಮಣ್ಣಿನ ಫಲವತ್ತತೆ ಮತ್ತು ಮಣ್ಣಿನಲ್ಲಿರುವ ಫೋಷಕಾಂಶಗಳ ಪರೀಕ್ಷೆಮಾಡಿ ಬೇಕಾದಷ್ಟೇ ಪ್ರಮಾಣದ ಲಘು ಫೋಷಕಾಂಶಗಳನ್ನು ಭೂಮಿಗೆ ಒದಗಿಸುವುದು ಹೆಚ್ಚೇನು ಹಾನಿಕಾರಕವಲ್ಲವೇನೋ ಅನ್ನಿಸುತ್ತದೆ.

     ಇಂದಿನ ಕೃಷಿಕರ ಪರಿಸ್ಥಿತಿಯಲ್ಲಿ ಎಲ್ಲವೂ ಸವಾಯವ ವಿಧಾನ ಅಥವಾ ಶೂನ್ಯ ಕೃಷಿ ಎಂದು ತೋಟದಲ್ಲಿ ಹುಟ್ಟಿರುವ ಕಳೆಯನ್ನೂ ತೆಗೆಸದೆ ಓಡಾಡಲೂ ಬಾರದಂತಹ ಪರಿಸ್ಥಿತಿಯ ನಿರ್ಮಾಣ ಎಷ್ಟು ಸರಿ? ಮೇಲೆ ತಿಳಿಸಿದಂತ ತೋಟಗಳನ್ನು ನೋಡಿದಾಗ ಬೇಸರವಾಗದೆ ಇರಲಾರದು, ಕೆಲಸಗಾರರ ಕೊರತೆ ಇದೆ ನಿಜ, ಆದರೆ ತೋಟ ಗದ್ದೆಗಳ ಕೆಲಸ ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಖಂಡಿತಾ ಬಂದಿಲ್ಲ, ಬರುವುದೂ ಇಲ್ಲವೆನೋ.



     ಸಾವಯವ ಕೃಷಿ ಮಾಡಲು ಹೋಗಿ ಬೆಳೆಗೆ ಹಾನಿಯಾದರೆ ಸ್ವಲ್ಪ ಪ್ರಮಾಣದ ರಾಸಾಯನಿಕ ಔಷದಿ ಬಳಸಿದ್ದರೆ ಬೆಳೆಯನ್ನು ಉಳಿಸಿಕೊಳ್ಳಬಹುದಿತ್ತೇನೋ ಅನಿಸಿಬಿಡುತ್ತಲ್ಲಾ.ಕೃಷಿ ತಜ್ಞರ ಸಲಹೆ ಪಡೆದು ಸರಿಯಾದ ಪ್ರಮಾಣದ ರಾಸಾಯನಿಕ ಔಷದಗಳ ಬಳಕೆ ಸೂಕ್ತವೇನೋ ಅನ್ನಿಸುತ್ತದೆ.



     ಅಂದಹಾಗೆ ನಾವು ಅಡಿಕೆ ತೋಟಕ್ಕೆ ಕೋಲ್ಮನ್ ಹೇಳಿ ಹೋದ ಅದೇ ಅಪ್ಪ ಹಾಕಿದ ಆಲದಮರ ಎನ್ನುವ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದರೂ ಅದು ಸಾವಯವ ಅನ್ನಿಸಿಕೊಳ್ಳಲಾರದು, ನಿಜ ಒಂದು ಪ್ರತಿಷತ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ಸಿಂಪರಣೆ ಮಾಡಿದಲ್ಲಿ ಸಾವಯವ ಕೃಷಿಯಂತೆ ಪರಿಗಣಿಸುವ ರಿಯಾಯತಿ ಇದೆ, ಆದರೆ ಅದು ಕೂಡ ಸಂಪೂರ್ಣ ಸಾವಯವ ಅನ್ನಿಸಿಕೊಳ್ಳಲಾರದು, ನೆನಪಿರಲಿ, ಬಯೋ ಎಂದು ಬರೆದದ್ದೆಲ್ಲವೂ ಸಾವಯವ ಎಂದು ಪರಿಗಣಿಸಿದರೆ ನಮ್ಮಂತಹ ಮೂರ್ಖರು ಮತ್ತಾರು ಇರಲಾರರು. ಒಂದು ಪರ್ಸೆಂಟ್ ಪ್ರಮಾಣದಲ್ಲಿ ಬೋರ್ಡೋ ಬಳಸಿದರೆ ಕೊಳೆರೋಗ ನಿಯಂತ್ರಣ ಎಷ್ಟು ಮಟ್ಟಿಗೆ ಸಾಧ್ಯ?

    ನಾವು ಎಷ್ಟು ಜನ ಕೃಷಿಕರು ಸರಿಯಾದ ಪ್ರಮಾಣದಲ್ಲಿ ಬೋರ್ಡೋ ಮಿಶ್ರಣ ತಯಾರಿಸಿದ್ದೇವೆ? ಒಬ್ಬೊಬ್ಬರದ್ದು ಒಂದೊಂದು ರೀತಿ, ಒಬ್ಬರು ಒಂದು ಕೇಜಿ ಸುಣ್ಣ, ಎರೆಡು ಕೇಜಿ ಮೈಲು ತುತ್ತ, ಇನ್ನೊಬ್ಬರದು ಮೂರುಕೇಜಿ ಸುಣ್ಣ ಒಂದು ಕೇಜಿ ಮೈಲುತುತ್ತ, ಮಿಶ್ರಣ ಸರಿಯಾಗಿದೆಯಾ, ಪಿ ಹೆಚ್ ಎಷ್ಟು ಎಂದು ಲಿಟ್ಮಸ್ ಟೆಸ್ಟ್ ಮಾಡುವುದು ಹೇಗೆ ಎನ್ನುವುದು ನಮ್ಮಲ್ಲಿ ಅನೇಕರಿಗೆ ಗೊತ್ತಿದೆಯೊ ಇಲ್ಲವೊ ಒಂದು ವೇಳೆ ಗೊತ್ತಿದ್ದರೂ ಲಿಟ್ಮಸ್ ಪೇಪರುಗಳು ಸಿಕ್ಕೋದಿಲ್ಲ. ಮೂರು ನಾಲ್ಕು ಬಾರಿ ಬೊರ್ಡೊ ಮಿಶ್ರಣ ಸಿಂಪರಣೆ ಮಾಡಿದರೂ ಕೊಳೆರೋಗ ನಿಯಂತ್ರಣ ಸಾಧ್ಯವಾಗಿಲ್ಲ.

     ಇನ್ನು ಮಳೆ ಬರುತ್ತಿರುವಾಗ ಕೊಳೆ ಔಷದಿ ಸಿಂಪಡಿಸಿದರೆ ಅದರ ಪ್ರಯೋಜನವಾಗುತ್ತಾ? ಮಳೆ ನೀರಿನಲ್ಲಿ ಔಷದಿ ಪ್ರಮಾಣ ಕಡಿಮೆಯಾಗದೆ ಉಳಿಯಲು ಸಾಧ್ಯವೇ?

      ಅಜ್ಜ ಮುತ್ತಾತನ ಕಾಲದಿಂದಲೂ ಬೋರ್ಡೋ ಮಿಶ್ರಣವನ್ನು ಮಳೆ ಸುರಿಯುತ್ತಿದ್ದಾಗ, ಕೊಳೆಯ ಲಕ್ಷಣಗಳು ಕಂಡಾಗ ಹೊಡೆಯುವ ಪರಿಪಾಠ ಅಷ್ಟು ಸುಲಭವಾಗಿ ಬಿಡಲು ಆಗುತ್ತಿಲ್ಲ, ಯಾರು ಏನೇ ಹೇಳಿದರೂ ಅಜ್ಜ ಮುತ್ತಾತನ ಕಾಲದಿಂದಲೂ ಮಾಡಿದ್ದನ್ನು ಬದಲಾಯಿಸಿಕೊಳ್ಳುವುದು ಕಷ್ಟವೇ ಅಲ್ಲವೇ?

Friday 31 December 2010

ಗುಝಾರಿಶ್(Guzaarish) -ಇದು ಬಿಡುಗಡೆಯ ಬೇಡಿಕೆ, ಒಮ್ಮೆ ಚಿತ್ರ ನೋಡಿ ಎಂಬ ನನ್ನ ಗುಝಾರಿಶ್

ಗುಝಾರಿಶ್, ಸಂಜಯ್ ಲೀಲಾ ಬನ್ಸಾಲಿಯವರ ಮತ್ತೊಂದು ಕಲಾತ್ಮಕ ಚಿತ್ರ, ಗುಝಾರಿಶ್ ಎಂದರೆ ಬೇಡಿಕೆ ಅಥವಾ ಕೋರಿಕೆ ಎನ್ನುವ ಅರ್ಥ ಕೊಡುತ್ತದೆ ಅದು ಹೃತಿಕ್ ರೋಷನ್ ನ ಕಣ್ಣುಗಳಲ್ಲಿಯೇ ವ್ಯಕ್ತಾವಾಗಿ ಹೋಗುತ್ತೆ.

ಇದೊಂದು ಸಂಜಯ್ ಲೀಲಾ ಬನ್ಸಾಲಿಯವರ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು, ಇಲ್ಲಿ ಪಾತ್ರದ ಭಾವನೆಗಳಿಗೆ ಹೆಚ್ಚಿನ ಮಹತ್ವವಿದೆ, ಅದ್ಯಾಕೋ ಗೊತ್ತಿಲ್ಲ ಇಂದ್ರಜಾಲ ಅಥವಾ ಮ್ಯಾಜಿಕ್ ಶೋ ಗಳು ನನಗೆ ತುಂಬಾ ಇಷ್ಟವಾಗಿಬಿಡುತ್ತದೆ, ಕಣ್ಣು ಇಷ್ಟೆಲ್ಲಾ ಮೋಸ ಹೋಗುತ್ತಲ್ಲಾ ಅಂತಲೂ ಇರಬಹುದೇನೋ? ಅದೇನೋ ಒಂತರಾ ಖುಷಿ.

ಕಥಾನಾಯಕ ಈಥನ್ ಮಾಸ್ಕರೇನಸ್ (ಹೃತಿಕ್ ರೋಷನ್), ಒಂದು ಕಾಲದಲ್ಲಿ ಅದ್ಬುತ ಇಂದ್ರಜಾಲಿಗನಾಗಿ ಹೆಸರುಗಳಿಸುತ್ತಾನೆ, ಅದನ್ನು ಸಹಿಸದ ಆತನ ಗೆಳೆಯೆನೊಬ್ಬ ಈಥನ್ ನ ಅತಿ ಜನಪ್ರಿಯ ಕಾಂಡಲ್ ಲೈಟ್ ಟ್ರಿಕ್ ನಲ್ಲಿ ಗಾಳಿಯಲ್ಲಿ ತೇಲುತ್ತಿರುವಾಗ ಕ್ರೇನ್ ನ ತಂತಿಯನ್ನು ಕತ್ತರಿಸುವಂತೆ ಮಾಡಿ ಈಥನ್ ನ ಬೆನ್ನು ಮೂಳೆಗೆ ಪೆಟ್ಟು ಬಿದ್ದು ಪ್ಯಾರಲೈಸ್(ಪಾರ್ಶ್ವವಾಯು) ಆಗುವಂತಹ ಕ್ರೂರ ಕೃತ್ಯವನ್ನೆಸಗುತ್ತಾನೆ.ಈಥನ್ ಬೀಳುವ ದೃಶ್ಯ ಕಣ್ಣು ಮಂಜಾಗಿಸುತ್ತದೆ, ಕುತ್ತಿಗೆಯ ಮೇಲ್ಬಾಗ ಮಾತ್ರವೇ ಸ್ಪರ್ಶ ಜ್ಞಾನ ಮತ್ತು ಚಲಿಸಲು ಸಾಧ್ಯವಾಗುತ್ತದೆ, ಹೃತಿಕ್ ನ ಆಕರ್ಷಕ ಬಿಳಿ ಕಣ್ಣು ದೃಶ್ಯಕ್ಕೆ ಇನ್ನೊಂದಿಷ್ಟು ಭಾವನೆಗಳನ್ನು ತುಂಬಿದೆ ಅನ್ನಿಸುತ್ತೆ ಇಡೀ ಚಿತ್ರದ ಛಾಯಾಗ್ರಹಣ ಅದ್ಬುತ.

     ಬದುಕಿ ತೋರಿಸಬೇಕೆಂಬ ಛಲದಿಂದ ಹನ್ನೆರೆಡು ವರ್ಷಗಳನ್ನು ಕಳೆಯುವ ಈಥನ್ ಗೆ ನರ್ಸ್ ಆಗಿ ತೆರೆಯ ಮೇಲೆ ಆವರಿಸಿಕೊಳ್ಳುವುದು ಸೋಫಿಯಾ ಎನ್ನುವ ಚಲುವೆ, ಬರೀ ಚಲುವೆಯಲ್ಲ ಹಿಂದಿಚಿತ್ರರಂಗದ ಮೇರುತಾರೆ ಬಚ್ಚನ್ ಕುಟುಂಬದ ಸೊಸೆ ಐಶ್ ಬೇಬಿ, ಐಶ್ವರ್ಯ ರೈ, ನರ್ಸಗಳೆಲ್ಲಾ ಇಷ್ಟು ಸುಂದರವಾಗಿದ್ದರೆ ಅವರನ್ನು ಸಿಸ್ಟರ್ ಅಂತ ಕರೆಯೋದು ತುಂಬಾ ಕಷ್ಟಾವಾಗಿಬಿಡುತ್ತಿತ್ತೇನೋ ಅನ್ನುವಷ್ಟು ಸುಂದರವಾಗಿ ಕಾಣಿಸುತ್ತಾಳೆ. ಚಿತ್ರದ ಒಂದು ದೃಶ್ಯದಲ್ಲಿ ಹೃತಿಕ್ ಸಹ ಹೇಳುತ್ತಾನೆ ನಾನು ಈಕೆಯನ್ನು ಸಿಸ್ಟರ್ ಎಂದು ಕರೆಯಲು ಸಾದ್ಯವಾಗದಷ್ಟು ಅಂದಗಾತಿ ಎಂದು!.



     ಹಾಸಿಗೆ ಹಿಡಿದ ಹನ್ನೆರೆಡು ವರ್ಷಗಳಲ್ಲಿ ಈಥನ್ ರೇಡಿಯೋ ಜಾಕಿಯಾಗಿ "ರೇಡಿಯೋ ಜಿಂದಗಿ" ಎನ್ನುವ ಕಾರ್ಯಕ್ರಮದ ಮೂಲಕ ಲಕ್ಷಾಂತರ ಕೇಳುಗರ ಬದುಕಿನ ಆಶಾಕಿರಣವಾಗಿ ಬದುಕುವ ನಾಯಕನಿಗೆ ಬದುಕಿದ್ದು ಸಾಕು ಎನಿಸಲು ಆರಂಭವಾಗಿಬಿಡುತ್ತದೆ, ತನ್ನ ಅಸಹಾಯಕತೆಯನ್ನು ಸೋಫಿಯಾಳೊಂದಿಕೆ ತೋಡಿಕೊಳ್ಳುತ್ತಾನೆ, ಸಿಟ್ಟುಬಂದಾಗ ತನ್ನಿಂದ ಸಿಟ್ಟನ್ನು ವ್ಯಕ್ತಪಡಿಸಲು ಅಸಾಧ್ಯವೆನಿಸುತ್ತದೆ, ಮೂಗಿನ ಮೇಲೆ ಕುಳಿತ ನೊಣವನ್ನು ಸಹ ಬೆರೆಸುವುದು ಸಾಧ್ಯವಾಗದೇ ಹೋದಾಗ ಕಣ್ಣುಗಳಲ್ಲಿ ನೋವು ಮುಖದಲ್ಲಿ ನಗು ಬರುವ ದೃಶ್ಯ ಅದ್ಬುತವಾಗಿ ಮೂಡಿಬಂದಿದೆ. ದೋ ಎಂದು ಸುರಿಯುವ ಮಳೆ ಆರಂಭವಾದಾಗ ಮಾಳಿಗೆ( ಸೂರು)ಯಿಂದ ತೊಟ್ಟಿಕ್ಕುವ ಮಳೆ ಹನಿ ಈಥನ್ ನ ಮುಖದ ಮೇಲೆ ಬೀಳಲಾರಂಬಿಸುತ್ತದೆ ಮೊದಲ ನಾಲ್ಕು ಹನಿಗಳು ಆತನಿಗೆ ಖುಷಿ ನೀಡುತ್ತದೆ, ನನ್ನೊಂದಿಗೆ ಯುದ್ದಕ್ಕೆ ಬರುತ್ತೀಯಾ ಬಾ ಎಂದು ಹೇಳುತ್ತಾನೆ ಆ ನಂತರ ಅದು ಕಿರಿಕಿರಿ ನೀಡಲು ಆರಂಭವಾಗುತ್ತದೆ, ರಾತ್ರಿ ಸಮಯವಾದ್ದರಿಂದ ಸೂಫಿಯಾ ತನ್ನ ಮನೆಗೆ ತೆರಳಿರುತ್ತಾಳೆ, ಯಾರೂ ಸಹಾಯಕ್ಕೆ ಬರದೇ ಬೆಳಗ್ಗೆ ಸೋಫಿಯಾ ಬರುವ ತನಕವೂ ಅದೇ ಕಿರಿಕಿರಿ ಅನುಭವಿಸುವ ದೃಶ್ಯಗಳು ಮನ ಕಲಕುವಂತಿದೆ, ಹದಿನಾಲ್ಕು ವರ್ಷಗಳ ಕಾಲ ಯಾವುದೇ ಬೇಸರವಿಲ್ಲದೆ ತನ್ನ ಸೇವೆಮಾಡಿದ ಚಲುವೆಗೆ ಹೂಗುಚ್ಚದ ಗಡಿಗೆಯ(Flower Pot)ನ್ನು ಗೋಡೆಗೆ ಎಸೆಯುವಂತೆ ಹೇಳುತ್ತಾನೆ, ತನಗೆ ಸಿಟ್ಟನ್ನು ವ್ಯಕ್ತ ಪಡಿಸೋಕು ಆಗದ ಪರಿಸ್ಥಿತಿ ಎಂದು ನೋವನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ.

     ರೇಡಿಯೋ ಪ್ರೊಡ್ಯೂಸರ್ ಎಂದು ಸುಳ್ಳು ಹೇಳಿ ಮ್ಯಾಜಿಕ್ ಕಲಿಯಲು ಬಂದ ಓಮರ್ ಸಿದ್ದಗಿ(ಆದಿತ್ಯ ರಾಯ್ ಕಪೂರ್) ಸಿಕ್ಕಿ ಬೀಳುತ್ತಾನೆ, ತಾನು ಚಿಕ್ಕಂದಿನಲ್ಲಿ ನಿಮ್ಮಿಂದ ಪಡೆದ ಆಟೋಗ್ರಾಫ್ ಇಟ್ಟುಕೊಂಡಿದ್ದೇನೆ, ಮೆಜಿಷಿಯನ್ ಆಗೋದು ತನ್ನ ಮಹದಾಸೆ ಎಂದಾಗ, ನಾಯಕ ತಾನು ಕಲಿತ ಇಂದ್ರಜಾಲ(ಮ್ಯಾಜಿಕ್) ತನ್ನೊಂದಿಗೆ ಮಣ್ಣಾಗಬಾರದೆನ್ನುವ ಉದ್ದೇಶದಿಂದ ತನಗೆ ಈ ಪರಿಸ್ಥಿತಿಗೆ ತಂದ ಗೆಳೆಯನ ಮಗನೆಂದು ಗೊತ್ತಿದ್ದೂ ಸಂಪೂರ್ಣವಾದ ವಿದ್ಯೆ ಧಾರೆ ಎರೆಯುತ್ತಾನೆ.

     ಕಾನೂನಿನ ಸಲಹೆಗಾರ್ತಿಯಾಗಿ, ಮನೆಯ ಒಬ್ಬ ಸದಸ್ಯೆಯಂತೆ ಇರುವ ದೇವಯಾನಿ(ಶೆಹೆನಾಝ್)ಯ ಮೂಲಕ ಇಚ್ಛಾಮರಣಕ್ಕೆ ಕೋರ್ಟಗೆ ಅರ್ಜಿ ಹಾಕಿ ವಾದಿಸಿವುಂತೆ ಕೇಳಿಕೊಳ್ಳುತ್ತಾನೆ, ಅದಕ್ಕೆ ಒಪ್ಪದೆ ನಿನಗೆ ಸಾಯುವಂತಹದ್ದೇನಾಗಿದೆ ಎಂದಾಗ ಬದುಕಿದ್ದು ಏನು ಮಾಡಲು ಸಾಧ್ಯ, ನಿನ್ನ ಸಂಬಳ ನಿನ್ನ ಕೈ ಸೇರುತ್ತೆ ವಾದ ಮಾಡು ನೀನು ನನ್ನ ಲಾಯರ್ ಮಾತ್ರ ಎಂದು ಸಿಡುಕುವ ನಾಯಕನಿಂದ ಸಿಟ್ಟೆದ್ದು ದೇವಯಾನಿ ಇನ್ನೇನಾದರೂ ಬೇಕಾ ಎಂದಾಗ ಆತ ಹೇಳುವ ಮಾತು ತನಗೆ ಸುಂದರವಾದ ಹೆಣ್ಣು ಬೇಕು ಎನ್ನುವ ಮಾತುಗಳು ಆತನ ಅಸಾಹಾಯಕತೆಯ ಬಗ್ಗೆ ಸೂಚ್ಯವಾಗಿ ಹೇಳಿಕೊಳ್ಳುವ ಅದ್ಬುತ ವಾಕ್ಚಾತುರ್ಯದ ಸೀನುಗಳು,

     ಓಮರ್ ಹಾಸಿಗೆ ಸರಿಮಾಡಲೆಂದು ಈಥನ್ ನನ್ನು ಎತ್ತಿ ಕೂರಿಸಿ ಗೊತ್ತಾಗದೆ ಕೈ ಬಿಟ್ಟಾಗ ನೆಲಕ್ಕೆ ಬಿದ್ದಾಗ ಆತನನ್ನು ಎತ್ತಲಾಗದೆ ಸೋಫಿಯಾಳನ್ನು ಕೂಗಿ ಕರೆದಾಗ ಓಡಿ ಬಂದು ಎತ್ತಿ ಮಲಗಿಸುತ್ತಾಳೆ, ಆಗ ನಾಯಕ ಅವಳಿಗೆ ಹೇಳುತ್ತಾನೆ ಎಂತಾ ದುರಂತವಾಗಿ ಹೋಯಿತು, ಎಷ್ಟೇ ಪ್ರಯತ್ನ ಪಟ್ಟರೂ ನಿನ್ನ ಕಾಲುಗಳು ಕಾಣಲೇ ಇಲ್ಲ ಎಂದು, ಐಶ್ ಬೇಬಿ ಚಿತ್ರದುದ್ದಕ್ಕೂ ಉದ್ದ ಗೌನ್ ತೊಟ್ಟೇ ಓಡಾಡುತಾಳೆ, ನೀನು ಮಿನಿ ಸ್ಕರ್ಟ್ ಹಾಕಿಕೊಂಡು ಓಡಾಡಿದಾಗ ನಿನ್ನ ಸುಂದರ ಕಾಲುಗಳನ್ನು ನಾನು ನೋಡಿದಂದು ನಾನು ಮತ್ತೆ ನೆಡೆಯಲಾರಂಭಿಸಿಬಿಡುತ್ತೇನೆ ಎಂದು ಹಾಸ್ಯದ ಚಟಾಕಿ ಹಾರಿಸುವ, ತುಸು ಹೆಚ್ಚೆನಿಸುವ ಇಂಗ್ಲೀಷ್ ಭಾಷೆ ಬಳಸಲಾಗಿದೆ ಎಂದುಕೊಳ್ಳುವಾಗಲೇ ಹೃತಿಕ್ ಮಾತಿನ ಶೈಲಿ ಇಷ್ಟಾಗಿಬಿಡುತ್ತೆ!

     ಮುಂದೆ ಈಥನ್ ನ ಡಾಕ್ಟರ್ ನಾಯಕ್(ಸುಹೇಲ್ ಸೇಟ್)ಗೆ ದೇವಯಾನಿ ಈಥನ್ ಇಚ್ಛಾಮರಣದ ಇಂಗಿತ ವ್ಯಕ್ತ ಪಡಿಸಿದ್ದಾನೆಂದು ಹೇಳುತ್ತಾಳೆ, ನಂತರ ಡಾಕ್ಟರ್ ಕೂಡಾ ಮನ ಪರಿವರ್ತನೆಗೆ ಪ್ರಯತ್ನಿಸಿದಾಗ ಈಥನ್ ಕೇಳುವ ಪ್ರಶ್ನೆಗಳಿಗೆಲ್ಲಾ ಡಾಕ್ಟರ್ ಇಲ್ಲಾ ಎನ್ನುವ ಉತ್ತರವನ್ನಷ್ಟೇ ನೀಡಬೇಕಾಗುತ್ತದೆ.

ದೇವಯಾನಿಗೆ ಈಥನ್ ನೋವಿನ ಅರಿವಾಗಿ ಯುಥನೇಶಿಯಾ( ಇಚ್ಛಾ ಮರಣ)ದ ಅರ್ಜಿಯನ್ನು ಕೋರ್ಟ್ ನಲ್ಲಿ ಹಾಕುತ್ತಾಳೆ,ರೇಡಿಯೋ ಮೂಲಕ ನಿನ್ನೆಲ್ಲಾ ಕೇಳುಗರ ಒಗ್ಗಟ್ಟು ಸಂಪಾದಿಸುವ ಮೂಲಕ ನಿನ್ನ ಕೋರಿಕೆಯನ್ನು ಜಡ್ಜ್ ನಿರಾಕರಿಸಲಾಗದಷ್ಟು ಮಾಡು ಎಂದು ಸಲಹೆ ನೀಡುತ್ತಾಳೆ, ಪ್ರೊಜೆಕ್ಟ್ ಇಥನೇಶಿಯಾ(ಯುಥನೇಶಿಯಾ) ಕಾರ್ಯಕ್ರಮದಲ್ಲಿ ಮಾತಾಡುವ ದೃಶ್ಯಗಳನ್ನು ನೋಡಿದರೇ ಚೆನ್ನ. ವಾದ ಆರಂಭವಾದಾಗ ಪ್ರತಿವಾದಿ ಲಾಯರ್ ವಿರೋಧ ವ್ಯಕ್ತಪಡಿಸುವ ದೃಶ್ಯಗಳು, ಜಡ್ಜ್ ಈಥನ್ ನ ಮನೆಗೇ ಬಂದು ವಾದ ವಿವಾದಗಳನ್ನು ಆಲಿಸುವ, ನೀವೇನು ಹೇಳಲು ಇಚ್ಚಿಸುತ್ತೀರಿ ಎಂದು ನಾಯಕನನ್ನು ಕೇಳಿದಾಗ ನಾನೊಂದು ಮ್ಯಾಜಿಕ್ ತೋರಿಸುತ್ತೇನೆ ಯುವರ್ ಆನರ್ ಎಂದು, ಪೆಟ್ಟಿಗೆಯೊಳಕ್ಕೆ ಅರವತ್ತು ಸೆಕೆಂಡು ಇರುವಂತೆ ಪ್ರತಿವಾದಿ ಲಾಯರ್ ಗೆ ಹೇಳಿದಾಗ ಅದರೊಳಗಿದ್ದ ಲಾಯರ್ ಅಲ್ಲಿರಲಾರದೆ ಪೆಟ್ಟಿಗೆಯೊಳಗಿಂದಲೇ ಬಾಗಿಲು ಬಡಿಯುವ, ನಂತರ ಇಂತ ಕಿರುದಾದ ಪೆಟ್ಟಿಗೆಯಲ್ಲಿ ಉಸಿರುಗಟ್ಟುತ್ತೆ, ಅಲುಗಾಡಲೂ ಸಾಧ್ಯವಿಲ್ಲ ಎಂದಾಗ ನೀವು ನನ್ನ ಜೀವನದ ಅರವತ್ತು ಸೆಕೆಂಡ್ ಗಳನ್ನು ಕೆಳೆಯಲು ಸಾಧ್ಯವಿಲ್ಲ ಎಂದಾಯಿತು, ಇದೇ ನನ್ನ ಪರಿಸ್ಥಿತಿ ಎಂದು ಹೇಳುವ ಸೀನುಗಳು ಇಷ್ಟವಾಗುತ್ತೆ.

ಮುಂದೆ ಏನಾಯಿತು? ಜಡ್ಜ್ ನಾಯಕನ ಪರವಾಗಿ ತೀರ್ಪು ಕೊಡುತ್ತಾರಾ? ಸೋಫಿಯಾ ಗಂಡನಿಂದ ಡೈವೋರ್ಸ್ ಪಡೆಯುತ್ತಾಳ! ಸೋಫಿಯಾಳ ಗಂಡನ ಬಗೆಗಿನ ನಾನು ಹೇಳಲೇ ಇಲ್ಲ ಬೇಕಂತಲೇ!,ನಾಯಕ ನಾಯಕಿಯ ಮಧ್ಯೆ ಅದೊಂತರಾ ಸರಿ ಬರೋಲ್ಲ ;) ಎಷ್ಟೇ ಕಥೆ ಹೇಳಿದರೂ ಕೆಲವೊಂದು ವಿಚಾರಗಳು ಬಿಟ್ಟು ಹೋಗಿರುತ್ತದೆ, ಪೂರ್ತಿ ಕಥೆಯನ್ನು ನಾನೇ ಹೇಳಿದರೆ ಚಿತ್ರ ಇಷ್ಟೇನಾ ಅನ್ನಿಸಿಬಿಡಬಹುದು. ಇಲ್ಲಿ ಬರೆದದ್ದೆಲ್ಲಾ ಸಂಕಲನಕಾರ ನೋಡಿದರೆ ಬೈಯ್ಯುವ ಸಾಧ್ಯತೆ ಇಲ್ಲದಿಲ್ಲ, ನನಗೆ ನೆನಪಾದಂತೆಲ್ಲಾ ಬರೆದಿದ್ದೇನೆ, ಒಂದು ಆರ್ಡರ್ ಅಂತ ಇರುತ್ತಲ್ಲಾ ಅದು ಇಲ್ಲಿ ಮಿಸ್ಸಾಗಿ ಹೋಗಿದೆ!

ಕೆಲವು ಚಿತ್ರಗಳನ್ನು ನೋಡಿದಾಗ ಚಿತ್ರ ಎಷ್ಟು ಚನ್ನಾಗಿದೆ ಅನ್ನಿಸಿಬಿಡುತ್ತೆ, ಆದರೆ ಮನೋರಂಜನೆಗಾಗಿ ಥಿಯೇಟರಿಗೆ ಬರುವ ಪ್ರೆಕ್ಷಕನಿಗೆ ಅದೇ ನೋವು ಕಣ್ಣಿರು ಕರುಳಿನ ಕಥೆಗಳೆಲ್ಲಾ ದಿನನಿತ್ಯ ನೋಡಿ ಇಷ್ಟಾ ಅಗೋದೆ ಕಷ್ಟ, ಇಂತಹುದೇ ಕಾರಣಕ್ಕೆ ಸಿನಿಮಾ ಗೆದ್ದಿದ್ದೆ ಸೋತಿದೆ ಎಂದು ಪಟ್ಟಿಮಾಡೋದು ಅಸಾಧ್ಯದ ಕೆಲಸವೇ ಸರಿ.ಸಂಜಯ್ ಲೀಲಾ ಬನ್ಸಾಲಿ ಚಿತ್ರ ಅಂತಲೇ ಚಿತ್ರ ನೋಡೋಕೆ ಹೋದವರಿಗೆ ಚಿತ್ರ ಅದ್ಬುತವಾಗಿದೆ ಅನ್ನಿಸದೇ ಇರಲಾರದು. ಹಾಡುಗಳು ಕೇಳಲು ನೋಡಲು ಚನ್ನಾಗಿದೆ.
ನೋಡಿ ಅನಿಸಿಕೆ ಹೇಳ್ತೀರಾ ಅಲ್ವಾ?.

ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸ ವರ್ಷ ಆರಂಭವಾಗಿಬಿಡುತ್ತೆ.. ಹೊಸ ವರುಷ ಹೊಸ ಹರುಷ ತರಲಿ ಎಂದು ಹಾರೈಸುತ್ತೇನೆ,ಹೊಸ ವರುಷದ ಹಾರ್ದಿಕ ಶುಭಾಶಯಗಳು.